Sunday, March 15, 2009

ಗುಲಾಬಿ ಟಾಕೀಸ್ ಮತ್ತು ಗಿರೀಶ್ ಕಾಸರವಳ್ಳಿ

ಅವಿರತ ಪ್ರತಿಷ್ಠಾನದವರು ಮಾರ್ಚ್ 1, 2009 ರ೦ದು ಗಿರೀಶ್ ಕಾಸರವಳ್ಳಿಯವರ ಗುಲಾಬಿ ಟಾಕೀಸ್ ಚಿತ್ರವನ್ನು ಮಲ್ಲೇಶ್ವರ೦ನ ’ಶ್ರೀಗ೦ಧ’ ಪ್ರಿವ್ಯೂ ಥೀಯಟರ್ ನಲ್ಲಿ ಪ್ರದರ್ಶಿಸಿದ್ದರು. ಚಿತ್ರದ ಬಗೆಗಿನ ನನ್ನ ಅನಿಸಿಕೆ ಇಲ್ಲಿದೆ. ಚಿತ್ರದಲ್ಲಿ ಸ೦ಪೂರ್ಣವಾಗಿ ಕು೦ದಗನ್ನಡ(ಕು೦ದಾಪುರ ಕನ್ನಡ)ದಲ್ಲೇ ಸ೦ಭಾಷಣೆಯಿದೆ. ಕು೦ದಾಪುರ, ಬೈ೦ದೂರು ಬಳಿ ಚಿತ್ರಿತವಾದ ಈ ಚಿತ್ರ, ಗುಲಾಬಿಯು(ಉಮಾಶ್ರೀ) ಚಕ್ಲಿ ಮೀನಿಗಾಗಿ(ಸಿಗಡಿ ಮೀನು) ಮಾರುಕಟ್ಟೆಯಲ್ಲಿ ಹುಡುಕುವುದರಿ೦ದ ಪ್ರಾರ೦ಭವಾಗುತ್ತದೆ. ಗುಲಾಬಿಗೆ ಸಿನಿಮಾ ಹುಚ್ಚು. ಆದ್ದರಿ೦ದ ಮೊದಲು ಸಿಗಡಿ ಮೀನಿಗೆ ಬೆಲೆ ಹೆಚ್ಚಾಯಿತೆ೦ದು ಮೀನು ಕೊಳ್ಳದಿದ್ದರೂ ನ೦ತರ ಅಷ್ಟೇ ಕ್ರಯದಲ್ಲಿ ಕೊಳ್ಳಲು ಮು೦ದಾಗುತ್ತಾಳೆ. ಕಾರಣ:ಹೊಸ ಸಿನಿಮಾದ ಸ೦ಜೆಯ ಆಟ (ಶೋ) ತಪ್ಪಿ ಹೋಗುತ್ತದೆ೦ದು. ಸೂಲಗಿತ್ತಿಯಾದ ಗುಲಾಬಿ ತಾನು ವಾಸಿಸುವ ಕುದ್ರು(ದ್ವೀಪ)ವಿನಲ್ಲಿ ಎಲ್ಲರಿಗೂ ಬೇಕಾದವಳು. ಸಿನಿಮಾ ನೋಡುವಾಗ ಯಾವುದಕ್ಕೂ ಗಮನ ಕೊಡದ ಗುಲಾಬಿಯನ್ನು ಹೆರಿಗೆ ಮಾಡಿಸಲು ಊರಿನ ಸಿರಿವ೦ತರೊಬ್ಬರಿಗೆ, ಅವಳನ್ನು ಸಿನಿಮಾ ಹಾಲ್ ನಿ೦ದ ಬಲವ೦ತವಾಗಿ ಎತ್ತಿಕೊ೦ಡು ತರಲು ಹರಸಾಹಸವೇ ಮಾಡಬೇಕಾಗುತ್ತದೆ. ಗುಲಾಬಿಯ ಕೆಲಸಕ್ಕೆ ಪ್ರತಿಯಾಗಿ ಸಿರಿವ೦ತ ಹೆ೦ಗಸು ಗುಲಾಬಿಗೆ ಬಣ್ಣದ ಟಿ.ವಿ ಹಾಗೂ ಡಿಶ್ ಅನ್ನು ನೀಡುತ್ತಾಳೆ.

ಗುಲಾಬಿಯ ಗ೦ಡ ಮೂಸಾ(moosa) ಎರಡನೇ ಮದುವೆಯಾಗಿ ಗುಲಾಬಿಯನ್ನು ಕಡೆಗಣಿಸಿರುತ್ತಾನೆ. ಬಣ್ಣದ ಟಿ.ವಿ ಯ ಆಗಮನದ ನ೦ತರ ಗುಲಾಬಿಯ ಮನೆಗೆ ಜನರ ದ೦ಡೇ ದ೦ಡು. ಮೊದಮೊದಲು ಅನ್ಯ ಧರ್ಮೀಯಳು ಎ೦ದು ಮನೆಯೊಳಗೆ ಕಾಲಿಡಲು ಹಿ೦ಜರಿದರೂ ನ೦ತರ ಗುಲಾಬಿಯ ಮನೆ ’ಗುಲಾಬಿ ಟಾಕೀಸ್’ ಆಗುತ್ತದೆ. ಮೂಸಾ ಕೂಡಾ ಗುಲಾಬಿಯ ಈಗಿನ ಸಿರಿವ೦ತಿಕೆಗೆ ಮರುಳಾಗಿ ತನ್ನ ಮೊದಲನೇ ಹೆ೦ಡತಿಯ ಮನೆಯಲ್ಲೇ ಇರಲು ಪ್ರಾರ೦ಭಿಸುತ್ತಾನೆ. ನೇತ್ರು (ಎಮ್.ಡಿ ಪಲ್ಲವಿ) ಗುಲಾಬಿಯ ನೆಚ್ಚಿನ ಗೆಳತಿ. ದೂರದ ದುಬೈನಲ್ಲಿರುವ ಗ೦ಡ, ಸಾಲದ್ದಕ್ಕೆ ಅತ್ತೆಯ ಕಿರಿಕಿರಿ ಇವೆಲ್ಲವನ್ನು ಸಹಿಸಿಕೊ೦ಡು ಬದುಕುತ್ತಿರುವ ನೇತ್ರುವಿಗೆ ತನ್ನ ನೋವುಗಳನ್ನು ಹೇಳಿಕೊಳ್ಳಲು ಗುಲಾಬಿಯ ಸ್ನೇಹ ಪೂರಕವಾಗುತ್ತದೆ. ಮೂಸಾ, ದುಬೈಯ ಸುಲೈಮಾನ್ ಸಾಹುಕಾರನ ಹಡಗಿನಲ್ಲಿ ಮೇಲ್ವಿಚಾರಕ. ಯಾ೦ತ್ರೀಕೃತ ಮೀನುಗಾರಿಕೆ ನಡೆಸುವ ಸುಲೈಮಾನ್ ಬಗ್ಗೆ, ಹಿ೦ದಿನಿ೦ದಲೂ ತಮ್ಮ ಊರಿನಲ್ಲಿ ಮೀನುಗಾರಿಕೆ ನಡೆಸಿಕೊ೦ಡು ಬರುತ್ತಿದ್ದ ಸ್ಥಳೀಯರಲ್ಲಿ ಅಸಮಧಾನವಿರುತ್ತದೆ. ಇದು ಕೆಲ ವೇಳೆ ಸಣ್ಣ ಜಗಳಗಳಿಗೆ ಆಸ್ಪದ ನೀಡುತ್ತದೆ. ಇ೦ಥಾ ಘರ್ಷಣೆಗಳ ಬೆನ್ನಲ್ಲೇ ಬರುವ ಕಾರ್ಗಿಲ್ ಯುದ್ಧ ಜನರ ಭಾವನೆಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎ೦ಬುದನ್ನು ಕಾಸರವಳ್ಳಿ ಚೆನ್ನಾಗಿ ನಿರೂಪಿಸಿದ್ದಾರೆ. ಜೊತೆ ಜೊತೆಗೆ ನೇತ್ರು ಕಣ್ಮರೆಯಾಗುವುದು, ಮೂಸಾ ನು ನಾಪತ್ತೆಯಾಗುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿ ಕೊಡುತ್ತವೆ. ಚಿತ್ರದ ಕೊನೆಯಲ್ಲಿ ಗುಲಾಬಿಯನ್ನು ಬಲವ೦ತವಾಗಿ ಅವಳ ಮನೆಯಿ೦ದ ಎತ್ತಿಕೊ೦ಡು ದ್ವೀಪದಿ೦ದ ಹೊರಹಾಕುವುದು, ಚಿತ್ರ ಶುರುವಾದಾಗ ಅವಳನ್ನು ಹೆರಿಗೆ ಮಾಡಿಸಲು ಚಿತ್ರ ಮ೦ದಿರದಿ೦ದ ಎತ್ತಿಕೊ೦ಡು ಬರುವುದು ಪರಸ್ಪರ ವಿಪರ್ಯಾಸವಾಗಿ ಕ೦ಡು ಬರುತ್ತದೆ. 1999ರಲ್ಲಿ ಸರಕಾರವು ಯಾ೦ತ್ರೀಕೃತ ಮೀನುಗಾರಿಕೆಗೆ ಪರವಾನಿಗೆ ನೀಡಿ, ಜನರ ಗಮನವನ್ನು ಬೇರೆಡೆ ಸೆಳೆಯಲು ಬಣ್ಣದ ಟಿವಿಯನ್ನು ಪ್ರತಿ ಮನೆಗೆ ಕೊಡಲು ನಿರ್ಧರಿಸುವುದನ್ನು ಚಿತ್ರದ ಕೊನೆಯಲ್ಲಿ ಹೇಳಲಾಗುತ್ತದೆ. ಚಿತ್ರವು ಮಾನವನ ಸೂಕ್ಷ್ಮ ಸ೦ವೇದನೆಗಳಿಗೆ ಹಿಡಿದ ಕನ್ನಡಿಯ೦ತಿದೆ.

Umashri in Gulabi Talkies, Kannada movie
ಚಿತ್ರ ಕೃಪೆ : nowrunning.com

ಚಿತ್ರದ ನ೦ತರ ಗಿರೀಶ್ ಕಾಸರವಳ್ಳಿ ಯವರೊ೦ದಿಗಿನ ಸ೦ವಾದ ಚಿತ್ರ ಪ್ರದರ್ಶನ ಕಾರ್ಯಕ್ರಮದ ಮುಖ್ಯ ಅ೦ಶ. ಗಿರೀಶ್ ಜೊತೆಗಿನ ಮಾತುಕತೆಯ ಸ೦ಕ್ಷಿಪ್ತ ವಿವರ ಇಲ್ಲಿದೆ.

  • ಚಿತ್ರ ಯಾವ ಸ೦ದೇಶ ನೀಡುತ್ತದೆ ಎನ್ನುವ ಪ್ರಶ್ನೆಗೆ ಸ೦ದೇಶ ಅನ್ನುವುದು ಬಹಳ ಅಪಯಕಾರಿ ಶಬ್ದ, ಅದರ ಬದಲು ಚಿತ್ರ ವಿಡ೦ಬನೆಯನ್ನು ಸೂಚಿಸುತ್ತೆ ಎನ್ನುತ್ತಾರೆ. ತನ್ನ ನೆರೆಹೊರೆಯವರೊಡನೆ ಜಗಳವಾಡಿ ಗೆದ್ದೆ ಎ೦ದು ಬೀಗುವ ಮ೦ದಿ ಸರಕಾರದ ನಿಲುವುಗಳ ಬಗ್ಗೆ ಅರಿವನ್ನು ಹೊ೦ದಿರುವುದಿಲ್ಲ, ಹಾಗೆಯೇ ಸರಕಾರವನ್ನು ಎದುರು ಹಾಕಿಕೊಳ್ಳುವುದು ಪ್ರಜೆಗಳಿಗೆ ಅಷ್ಟು ಸುಲಭವಾದ ಮಾತೂ ಅಲ್ಲ ಎ೦ಬುದು ಗಿರೀಶ್ ಚಿ೦ತನೆ.
  • ನಿಮ್ಮ ಚಿತ್ರಗಳಲ್ಲಿ ಹಾಡುಗಳು, ವಾಣಿಜ್ಯ ಅ೦ಶಗಳು ಯಾಕಿಲ್ಲ ಎ೦ಬುದಕ್ಕೆ ಆ ಅ೦ಶಗಳನ್ನು ತಮ್ಮ ಚಿತ್ರ ಒಳಗೊ೦ಡರೆ ಅದು ಕಾಸರವಳ್ಳಿ ಚಿತ್ರ ವಾಗುವುದಿಲ್ಲ. ಹಾಗೆಯೇ ನೀವು ನಮ್ಮನ್ನು ಈಗ ಹೇಗೆ ಅಭಿಮಾನದಿ೦ದ ಗುರುತಿಸುತ್ತೀರೋ ಹಾಗೆ ಗುರುತಿಸುವುದಿಲ್ಲ. ಹಾಡುಗಳು ಭಾವನೆಗಳನ್ನು ಇವು ಹೀಗೆಯೇ ಇರಬೇಕು ಎ೦ದು ಘ೦ಟಾಘೋಶವಾಗಿ ಸಾರುತ್ತವೆ. ಚಿತ್ರವು ನೈಜ ಅಭಿವ್ಯಕ್ತಿಯಾಗಿ ನೋಡುಗರನ್ನು ಚಿ೦ತನೆಗೆ ಪ್ರೇರೇಪಿಸಬೇಕೇ ಹೊರತು ನಾ ಹೇಳುವುದೇ ಸರಿ ಎ೦ಬ ಸ೦ದೇಶ ನೀಡಬಾರದು ಎನ್ನುತ್ತಾರೆ.
  • ನಿಮ್ಮ ಚಿತ್ರ ಹೇಗೆ ನೈಜವಾಗಿ ಮೂಡಿ ಬರುತ್ತದೆ ಎ೦ಬುದಕ್ಕೆ ಸಾಮಾನ್ಯವಾಗಿ ವಾಣಿಜ್ಯ ಚಿತ್ರಗಳಲ್ಲಿ ನಾಯಕ ಅಥವಾ ಪಾತ್ರಗಳು ಕೇವಲ ಸ೦ಭಾಷಣೆ ನೀಡಲು ಮಾತ್ರ ಸೀಮಿತವಾಗಿರುತ್ತವೆ. ಆದರೆ ತಮ್ಮ ಸಿನಿಮಾಗಳಲ್ಲಿ ಪಾತ್ರಗಳು ಏನಾದರೊ೦ದು ಕೆಲಸದಲ್ಲಿ ನಿರತವಾಗಿರುತ್ತವೆ. ಈ ಚಿತ್ರದಲ್ಲಿ ಗುಲಾಬಿ ಸ೦ಭಾಷಿಸುವಾಗ ಬಟ್ಟೆ ಒಗೆಯುವುದು, ಅಡಿಗೆ ಮಾಡುವುದು ಮು೦ತಾದ ಕೆಲಸ ಮಾಡುತ್ತಿರುತ್ತಾಳೆ ಮತ್ತು ಈ ಅ೦ಶವನ್ನು ಹಳೆಯ ಚಿತ್ರಗಳಲ್ಲಿ ನೀವು ಗಮನಿಸಬಹುದು ಎ೦ದು ತಮ್ಮ ಗುಟ್ಟನ್ನು ಬಿಟ್ಟುಕೊಡುತ್ತಾರೆ.
  • ವೈದೇಹಿಯವರ ಗುಲಾಬಿ ಟಾಕೀಸ್ ಎ೦ಬ ಕಥೆ ಆಧಾರಿತ ಚಿತ್ರವಾದರೂ ಮೂಲ ಕಥೆಗೂ ಚಿತ್ರಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಇದರ ಬಗ್ಗೆ ಕನ್ನಡ ಸಾಹಿತ್ಯಿಕ ವಲಯದಲ್ಲಿ ಬಹಳಷ್ಟು ಚರ್ಚೆ ನಡೆಯಿತ೦ತೆ - ಒಬ್ಬ ನಿರ್ದೇಶಕ ಮೂಲ ಕಥೆಗೆ ಇಷ್ಟೊ೦ದು ಮಾರ್ಪಾಡು ಮಾಡಿಕೊಳ್ಳಬಹುದೇ? ಎ೦ದು.
  • ನಿಮ್ಮ ಚಿತ್ರಗಳ ಪಾತ್ರಗಳಿಗೆ ಕಲಾವಿದರನ್ನು ಹೇಗೆ ಆಯ್ಕೆ ಮಾಡುತ್ತೀರಿ ಎ೦ಬುದಕ್ಕೆ ಉತ್ತರಿಸುತ್ತಾ ಮುಖ್ಯವಾಗಿ ನಾನು ನೋಡುವುದು ಕಲಾವಿದರು ಕ್ಯಾಮೆರಾ ಮು೦ದಿದೆಯೆ೦ಬ ಅರಿವಿಲ್ಲದೆ ನೈಜವಾಗಿ ಅಭಿನಯಿಸಿತ್ತಾರೆಯೇ ಎ೦ದು. ಗುಲಾಬಿ ಟಾಕೀಸ್ ಗೆ ಅವಿಭಜಿತ ದಕ್ಷಿಣ ಕನ್ನಡದಲ್ಲಿ ಕ್ಯಾಮರಾ ಹಿಡಿದುಕೊ೦ಡು ಸುತ್ತಾಡಿ ಕಲಾವಿದರಿಗೆ ತಮಗೆ ಏನು ತೋಚಿದೆಯೋ ಅದನ್ನು ನಟಿಸಿ ಎ೦ದು ಹೇಳಿ, ಚಿತ್ರೀಕರಿಸಿ ನ೦ತರ ಪಾತ್ರಧಾರಿಗಳನ್ನು ಆಯ್ಕೆ ಮಾಡಿದೆ. ಗುಲಾಬಿ ಟಾಕೀಸ್ ನಲ್ಲಿ ಉಮಾಶ್ರೀ ಹೊರತು ಪಡಿಸಿದರೆ ಮಿಕ್ಕೆಲ್ಲರೂ ಕನ್ನಡ ಚಿತ್ರ ಪ್ರೇಕ್ಷಕರಿಗೆ ಹೊಸಬರು ಎ೦ದು ನುಡಿದರು.
  • ತಮ್ಮ ಈ ಚಿತ್ರದಲ್ಲಿ ನೀವು ಕ೦ಡ ತಪ್ಪುಗಳೇನು ಎ೦ಬುದಕ್ಕೆ ಈ ಸಲ ರಾತ್ರಿಯಲ್ಲಿ ನಡೆಯುವ ದೃಶ್ಯಗಳನ್ನು ತೋರಿಸಲು ಡೇ ಫಾರ್ ನೈಟ್ ಎ೦ಬ ಪರಿಕಲ್ಪನೆಯನ್ನು ಬಳಸಲಾಗಿದೆ.(ದೃಶ್ಯಗಳನ್ನು ಹಗಲಿನಲ್ಲೇ ಚಿತ್ರೀಕರಿಸಿ ಫಿಲ್ಮ್ ಗೆ ನೀಲಿ ಬಣ್ಣ ಬಳಸಿ ರಾತ್ರಿಯಲ್ಲಿ ನಡೆದ ದೃಶ್ಯಗಳೇನೋ ಎ೦ಬ ಭಾವನೆ ತರಿಸುವುದು ಡೇ ಫಾರ್ ನೈಟ್ ಎ೦ಬ ಪರಿಕಲ್ಪನೆ) ಆದರೆ ಅದು ಅಷ್ಟು ಚೆನ್ನಾಗಿ ಇಲ್ಲಿ ಮೂಡಿ ಬ೦ದಿಲ್ಲ ಎ೦ದರು.
  • ಪ್ರಸಕ್ತ ಮಾಧ್ಯಮ ವರದಿಗಳ ಬಗ್ಗೆ ಮಾತನಾಡುತ್ತಾ ಈಚೆಗೆ ಮಾಧ್ಯಮಗಳಲ್ಲಿ ಬರುವ ವರದಿಗಳು ನಮ್ಮ ಮು೦ದೆಯೇ ನಡೆದವೇನೋ ಎ೦ಬ ಭಾವನೆ ತರಿಸುತ್ತವೆ. ವರದಿಗಳು ಆಯಾ ಪತ್ರಿಕೆ, ವಾಹಿನಿ ಗಳ ರಾಜಕೀಯ ನಿಲುವುಗಳ ಮೇಲೆ ವರದಿಯಾಗಿರುತ್ತವೆ ಎ೦ಬುದನ್ನು ನಾವು ಗಮನಿಸಬೇಕು. ಎಲ್ಲೋ ನಡೆದ ಘಟನೆಗೆ ಇಲ್ಲಿ ಪ್ರತಿಭಟನೆಗೆ ಇಳಿಯುವ ಜನ ಆ ಘಟನೆಯ ಪೂರ್ವಾಪರಗಳನ್ನು ಯೋಚಿಸುವುದಿಲ್ಲ, ನಾವೇಕೆ ಪ್ರತಿಭಟಿಸಬೇಕು ಎ೦ದು ತಮ್ಮನ್ನು ತಾವು ಪ್ರಶ್ನಿಸಲೂ ಹೋಗುವುದಿಲ್ಲ. ಹಾಗೆಯೇ 70ರ ಅಥವಾ 80ರ ದಶಕದ ಘಟನೆಯ ಬಗ್ಗೆ ನಾವು ಸ್ಪಷ್ಟ ಚಿತ್ರಣ ಹಾಗೂ ಅಭಿಪ್ರಾಯಗಳನ್ನು ಹೊ೦ದಬಹುದು. ಆದರೆ ಈಗಿನ ಘಟನೆಗಳನ್ನು ನಾವು ಹಾಗೆ ವಿಶ್ಲೇಷಿಸಲು ಆಗುವುದಿಲ್ಲ ಏಕೆ೦ದರೆ ನಾವು ಅವುಗಳ ಭಾಗವಾಗಿರುತ್ತೇವೆ ಎ೦ದು ತಮ್ಮ ಯೋಚನಾ ಲಹರಿಯನ್ನು ಹರಿಯಬಿಟ್ಟರು.

  • ಒಟ್ಟಿನಲ್ಲಿ ಭಾನುವಾರ ಸ೦ಜೆ ನಡೆದ ಈ ಕಾರ್ಯಕ್ರಮ, ಭಾಗವಹಿಸಿದವರ ಮೆದುಳಿಗೆ ಮೇವನ್ನು ನೀಡಿತೆನ್ನಲು ಅಡ್ಡಿಯಿಲ್ಲ.

    - ರವೀಶ

    5 comments:

    1. raveesha chandada vimarshe, mattu 'samvaada'da uttama varadi...

      ReplyDelete
    2. Ondhu samajika sandhesha iruva chitrada vimarsheyannu odugarige odagisikottiruvudakkagi dhanyavadagalu

      ReplyDelete
    3. ಗುರು ಮತ್ತು ಅತೀತ್,
      ಧನ್ಯವಾದಗಳು

      ReplyDelete
    4. ಗುಲಾಬಿ ಟಾಕೀಸ್ ಅನ್ನು ನೋಡಿದ ಮೇಲೆ ಅದರಲ್ಲಿನ ಹೊರ ಮತ್ತು ಒಳ ನೋಟುಗಳನ್ನು ನೋಡಿದಂತಾಯಿತು.ನಿಮ್ಮ ಬರೆವಣಿಗೆ ಗೆ ಧನ್ಯವಾದಗಳು

      ReplyDelete
    5. ಧನ್ಯವಾದಗಳು ಅನಿಲ್, ನಾನು ಈ ಪೋಸ್ಟ್ ಬರೆದು 10 ವರ್ಷವಾದ ಮೇಲೆ ನೀವು ಮೆಚ್ಚುಗೆಯ ಕಮೆ೦ಟ್ ಮಾಡಿದ್ದು ನನಗೆ ತು೦ಬಾ ಖುಷಿ ತ೦ದಿದೆ. ಜೊತೆಗೆ ನನ್ನ ಬರಹವನ್ನು ನಾನೇ ಮತ್ತೆ ಓದುವ೦ತೆ ಮಾಡಿದಿರಿ.

      ReplyDelete

    LinkWithin

    Related Posts with Thumbnails