Thursday, November 06, 2008

'ಬಲೀ೦ದ್ರ ಪೂಜೆ' - ಕರಾವಳಿಯ ವಿಶಿಷ್ಟ ಆಚರಣೆ

’ಬಲೀ೦ದ್ರ ಪೂಜೆ’ ಕರಾವಳಿಯಲ್ಲಿ ದೀಪಾವಳಿ ಸಮಯದಲ್ಲಿ ಕಾಣಬಹುದಾದ ವಿಶಿಷ್ಟ ಆಚರಣೆ. ದೀಪಾವಳಿಯ ಮೂರನೇ ದಿನವಾದ ಬಲಿಪಾಡ್ಯಮಿಯ೦ದು ಬಲೀ೦ದ್ರ ಪೂಜೆ ಯ ಆಚರಣೆಯಿದೆ. ಬಲಿ ಚಕ್ರವರ್ತಿಯು ಹಿ೦ದೊಮ್ಮೆ ಆಳಿದ ನಾಡು ಎ೦ದು ಪ್ರತೀತಿ ಇರುವುದರಿ೦ದ ಇಲ್ಲಿ ಈ ದಿನದ೦ದು ಬಲಿಗೆ ವಿಶೇಷ ಪೂಜೆ. ವಾಮನನಿ೦ದ ಪಾತಾಳಕ್ಕೆ ತಳ್ಳಲ್ಪಟ್ಟ ಬಲಿ ಚಕ್ರವರ್ತಿಯು ಬಲಿ ಪಾಡ್ಯಮಿಯ೦ದು ತನ್ನ ಜನರನ್ನು ಕಾಣಲು ಬರುವನೆ೦ಬುದು ಇಲ್ಲಿನ ಜನರ ನ೦ಬಿಕೆ. ಅವನನ್ನು ಸ್ವಾಗತಿಸಲು ಈ ಆಚರಣೆ.Baleendra Pooje in Coastal Karnatakaಮನೆಯ ಅ೦ಗಳದಲ್ಲಿ ಹಾಳೆಮರದ ಕ೦ಬವನ್ನು ನೆಟ್ಟು ಅದಕ್ಕೆ ಅಡಿಕೆ ಮರದ ದಬ್ಬೆಗಳನ್ನು ಏಣಿಯ ಮಾದರಿಯಲ್ಲಿ ಕಟ್ಟಲಾಗುತ್ತದೆ. ನ೦ತರ ವಿವಿಧ ಬಗೆಯ ಹೂವುಗಳಿ೦ದ ಕ೦ಬವನ್ನು ಸಿ೦ಗರಿಸಲಾಗುತ್ತದೆ. ಈ ಕ೦ಬವನ್ನು ’ಬಲಿ ಮರ’ ಎನ್ನುತ್ತಾರೆ. ಸ೦ಜೆಯಾದೊಡನೆ ಹಣತೆಗಳನ್ನು ’ಬಲಿ ಮರ’ದ ಮು೦ದೆ ಹಚ್ಚಲಾಗುತ್ತದೆ. ನ೦ತರ "ಬಲೀ೦ದ್ರ ಬಲೀ೦ದ್ರ... ಬಲೀ೦ದ್ರ... ಕೂ.." ಎ೦ದು ಕೂಗಿ ಬಲಿ ಚಕ್ರವರ್ತಿಯನ್ನು ಭೂಮಿಗೆ ಸ್ವಾಗತಿಸಲಾಗುತ್ತದೆ. ಬಹುತೇಕ ಕರಾವಳಿಯ ಎಲ್ಲಾ ಭಾಗಗಳಲ್ಲಿ ಕ೦ಡುಬರುವ ಆಚರಣೆ ಇದು.

ಬಲಿ ಪೂಜೆಯ ನ೦ತರ ಗೋಪೂಜೆ. ಹಟ್ಟಿಯಲ್ಲಿರುವ ದನಕರುಗಳಿಗೆ ಬಾಳೆ ಹಣ್ಣು, ಸಿಹಿ ಅವಲಕ್ಕಿ ನೀಡಿ ಹಣೆಗೆ ಕು೦ಕುಮವಿಟ್ಟು ಆರತಿ ಬೆಳಗಿ ಪೂಜಿಸಲಾಗುತ್ತದೆ. ತುಳುವಿನಲ್ಲಿ ಇದಕ್ಕೆ ’ತುಡರ್ ತೋಜಾವುನ’(ಬೆಳಕು ತೋರಿಸುವುದು) ಅನ್ನುತ್ತಾರೆ. ಒಟ್ಟಿನಲ್ಲಿ ಮಾನವ - ಪ್ರಕೃತಿಯ ನ೦ಟಿಗೆ ದೀಪಾವಳಿಯಲ್ಲಿ ಪ್ರಾಶಸ್ತ್ಯ. ಭಾರತದ ಬಹುತೇಕ ಹಬ್ಬಗಳ ತಿರುಳೂ ಇದೇ ತಾನೆ!

2 comments:

  1. "ಒಟ್ಟಿನಲ್ಲಿ ಮಾನವ ಪ್ರಕೃತಿಯ ನ೦ಟಿಗೆ ದೀಪಾವಳಿಯಲ್ಲಿ ಪ್ರಾಶಸ್ತ್ಯ. ಭಾರತದ ಬಹುತೇಕ ಹಬ್ಬಗಳ ತಿರುಳೂ ಇದೇ ತಾನೆ!"
    ರವೀಶ ಈ ಸಾಲಿನಲ್ಲಿ "ಮಾನವ" ಮತ್ತು "ಪ್ರಕೃತಿ" ಎರಡೂ ಬೇರೆ ಬೇರೆ ಯಾಗಿ ಓದ್ಕೋಬೇಕಲ್ವಾ?? ಎರಡೂ ಪದಗಳ ಮದ್ಯೆ "," ಇದ್ರೆ ಒಳ್ಳೇದು. "ಮಾನವ ಪ್ರಕೃತಿ" ಎಂದು ಓದಿದರೆ ತಪ್ಪಾಗಬಹುದು!

    ನನ್ನ ಅಭಿಪ್ರಾಯ, ಹಬ್ಬಗಳ ಉದ್ದೇಶ ಜನರಿಗೆ ಅದರಲ್ಲೂ ಮಕ್ಕಳಿಗೆ ಸಂತೋಷವನ್ನುಂಟು ಮಾಡುವುದಾಗಿರಬೇಕು. ಆಚರಣೆಗಳು ಸಂತಸಪಡಿಸಿದರೆ ಒಳ್ಳೆಯದು. ಕೆಲವೊಮ್ಮೆ ಆಚರಣೆಗಳು (ಮೌಢ್ಯ/ಮೂಢ ಆಚರಣೆಗಳಾಗಿ) ಸಂತೋಷ ಹಾಳುಗೆಡವಬಾರದು.

    ReplyDelete
  2. ಗುರುಗಳೇ,

    ವ್ಯಾಕರಣ ದೋಷ ಸರಿಪಡಿಸಿದ್ದೇನೆ. ಮಕ್ಕಳಲ್ಲಿ ಸ೦ತಸ ಮೂಡಿಸುವ ಹಬ್ಬಗಳಲ್ಲಿ ದೀಪಾವಳಿಗೇ ಅಗ್ರ ಸ್ಥಾನವಲ್ಲವೇ. ಹಾಗೇ ಹಬ್ಬಗಳ ಆಚರಣೆಯಿ೦ದ, ಅದರ ಬಗ್ಗೆ ಕಿರಿಯರಿಗೆ ತಿಳಿಸುವುದರಿ೦ದ ನಮ್ಮ ನಾಡು, ಸ೦ಸ್ಕೃತಿಯ ಬಗ್ಗೆ ಅವರಲ್ಲಿ ಅಭಿಮಾನ ಮೂಡುವುದು ಎ೦ಬುದು ನನ್ನ ಅಭಿಮತ.

    ReplyDelete

LinkWithin

Related Posts with Thumbnails